Anvekar add 3.jpg
SPOCO1a
SPOCO2

ಮೂಡಲಗಿಯಲ್ಲಿ ಒಗ್ಗಟ್ಟಿನ ಮಂತ್ರ, ಶಾಂತಿ, ಸಾಮರಸ್ಯ

Gokak Astro add 2
Beereshwara 25

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: “ಅರಭಾವಿ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಮುಸ್ಲಿಂ ಸಮುದಾಯದವರಿಗೆ ಇತರ ಸಮಾಜದವರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದು, ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಎಲ್ಲ ಸಮುದಾಯಗಳು ಒಗ್ಗಟ್ಟಿನ ಮಂತ್ರ ಪಠಿಸಿ ಶಾಂತಿ ಸಾಮರಸ್ಯವನ್ನು ಕಾಪಾಡಿಕೊಂಡು ಬರುತ್ತಿವೆ” ಎಂದು ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಬಳಿ ಜರುಗಿದ ಅರಬಾವಿ ಕ್ಷೇತ್ರದ ಮುಸ್ಲಿಂ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

“ಮುಸ್ಲಿಂ ಸಮುದಾಯದ ಪ್ರಗತಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ, ಈ ಸಮಾಜ ಶಿಕ್ಷಣದಲ್ಲಿ ಕ್ರಾಂತಿ ಮಾಡಬೇಕಿದೆ. ಬಹುತೇಕ ಎಲ್ಲ ಉದ್ಯೋಗಗಳಲ್ಲಿ ಗುರುತಿಸಿಕೊಂಡಿರುವ ಈ ಸಮಾಜದವರು ಶ್ರಮ ಜೀವಿಗಳು. ಯಾವುದೇ ಕೆಲಸವನ್ನು ಮಾಡಲು ಹಿಂಜರಿಯುವದಿಲ್ಲ. ನನಗೆ ಕೇವಲ ಒಂದು ಸಮುದಾಯದ ಮತವನ್ನು ಪಡೆದು ಆಯ್ಕೆಯಾಗದೇ ಎಲ್ಲ ಸಮುದಾಯಗಳು ನನಗೆ ಬೆಂಬಲ ಕೊಟ್ಟು ಆಶೀರ್ವಾದ ಮಾಡಿದಾಗಲೇ ಖುಷಿಯಾಗುತ್ತದೆ. ಪ್ರತಿ ಸಮಾಜಗಳ ಅಭ್ಯುದಯಕ್ಕೆ ದುಡಿಯುತ್ತಿದ್ದೇನೆ. ಅದರಂತೆ ಎಲ್ಲ ಸಮಾಜಗಳು ಕೂಡ ನನ್ನ ಬೆನ್ನಿಗಿವೆ. ಸತತವಾಗಿ ಆಶೀರ್ವಾದ ಮಾಡುತ್ತಾ ಬರುತ್ತಿದ್ದಾರೆ. ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೂ ನನ್ನ ಶತ ಕೋಟಿ ನಮನಗಳನ್ನು ಸಲ್ಲಿಸುತ್ತೇನೆಂದು” ತಿಳಿಸಿದರು.

“2014ರಲ್ಲಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಮೇಲೆ ಇಡೀ ದೇಶದ ಚಿತ್ರಣವೇ ಬದಲಾಗಿದೆ. ಭಾರತವನ್ನು ಯಾರು ದ್ವೇಷಿಸುತ್ತಿದ್ದರೋ ಅವರೇ ಇಂದು ನಮ್ಮ ದೇಶಕ್ಕೆ ಗೌರವ ನೀಡುತ್ತಿದ್ದಾರೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಮೋದಿ ಅವರು ಬ್ರೇಕ್ ಹಾಕುವ ಮೂಲಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಸಂಘಟನೆಗಳನ್ನು ಹತ್ತಿಕ್ಕುವ ಕಾರ್ಯವನ್ನು ಮಾಡಿದ್ದಾರೆ. ಯಾರೋ ಗಡಿಯಲ್ಲಿ ಬಾಂಬ್ ಸಿಡಿಸಿದರೇ ಅದಕ್ಕೆ ನಮ್ಮಲ್ಲಿರುವ ಮುಸ್ಲಿಂರನ್ನು ಅನುಮಾನದಿಂದ ಬೊಟ್ಟು ಮಾಡಿ ತೋರಿಸುತ್ತಿದ್ದೇವು. ಆದರೇ ಮೋದಿ ಅವರು ದೇಶದ ಚುಕ್ಕಾಣಿ ಹಿಡಿದ ಮೇಲೆ ವಿದ್ವಂಸಕ ಕೃತ್ಯಗಳಲ್ಲಿ ತೊಡಗುತ್ತಿದ್ದ ವ್ಯಕ್ತಿಗಳಿಗೆ ಕಡಿವಾಣ ಹಾಕುವ ಮೂಲಕ ದೇಶದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಹೇಳಿದರು.

ಮುಸ್ಲಿಂ ಸಮಾಜದ ಮಕ್ಕಳು ಸುಶಿಕ್ಷಿತರಾಗಿ ಸಮಾಜದಲ್ಲಿ ಮುಂದೆ ಬರಬೇಕು. ಶಾಲೆಗೆ ಹೋಗುವ ಮಕ್ಕಳನ್ನು ಎಂದಿಗೂ ಬಿಡಿಸಬೇಡಿ, ಶಿಕ್ಷಣವನ್ನು ಮೊಟುಕುಗೊಳಿಸಬೇಡಿ. ಇಂದು ಪ್ರತಿ ಮಕ್ಕಳು ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದಾರೆಂದರೆ ಅದಕ್ಕೆ ಶಿಕ್ಷಣದ ಬದಲಾವಣೆಯೇ ಕಾರಣ. ಸಮಾಜದಲ್ಲಿ ಶಿಕ್ಷಣದಿಂದ ನಾವು ಬದಲಾವಣೆ ತರಬೇಕಾಗಿದೆ. ಇದಕ್ಕೆ ಪಾಲಕ-ಪೋಷಕರು ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು.

ಕಳೆದ 2ತಿಂಗಳಿನಿಂದ ಅರಭಾವಿ ಕ್ಷೇತ್ರದಲ್ಲಿ ಎಲ್ಲ ಸಮಾಜಗಳನ್ನು ಒಟ್ಟುಗೂಡಿಸಿದ್ದೇವೆ. ಎಲ್ಲ ಸಮಾವೇಶಗಳು ಭರ್ಜರಿಯಾಗಿ ಯಶಸ್ವಿ ಮಾಡಿದ್ದಾರೆ. ಇದರಿಂದ ವಿರೋಧಿಗಳಿಗೆ ನಡುಕ ಪ್ರಾರಂಭವಾಗಿದೆ. ಯಾವ ಸಮಾಜದವರನ್ನು ಹಿಡಿಯಬೇಕೆಂಬ ಗೊಂದಲದಲ್ಲಿ ಇದ್ದಾರೆ. ಈಗ ಮುಸ್ಲಿಂ ಸಮಾಜದವರು ಒಂದಾಗಿ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಅವರ ಆಸೆಗೆ ತನ್ನೀರು ಎರಚಿದಂತಾಗಿದೆ. ವಿರೋಧಿಗಳ ಲೆಕ್ಕಾಚಾರ ಕ್ಷೇತ್ರದಲ್ಲಿ ಉಲ್ಟಾ ಆಗಿದೆ” ಎಂದು ತಿಳಿಸಿದರು.

KLE 1099

“ಕ್ಷೇತ್ರದಲ್ಲಿ ಮುಸ್ಲಿಂ ಸಮಾಜದವರ ಆಶೋತ್ತರಗಳಿಗೆ ಸ್ಪಂದಿಸಲಾಗಿದೆ.ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಬರುವ ಚುನಾವಣೆಯಲ್ಲಿ ಎಲ್ಲರೂ ರಾಜ್ಯದಲ್ಲಿ ಬಿಜೆಪಿ ಮತ್ತೇ ಅಧಿಕಾರಕ್ಕೆ ಬರುವಂತೆ ಪ್ರಾರ್ಥನೆ ಮಾಡಿಕೊಳ್ಳಿ, ನಮ್ಮ ಪಕ್ಷ ಅಧಿಕಾರಕ್ಕೆ ಮತ್ತೊಮ್ಮೆ ಬಂದರೇ ಅಭಿವೃದ್ದಿ ಕಾರ್ಯಗಳಿಗೆ ಮತ್ತಷ್ಟು ಅನುಕೂಲವಾಗಲಿದೆ” ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಮುಖಂಡ ಲಾಲಸಾಬ ಸಿದ್ದಾಪುರ ಮಾತನಾಡಿ, ಮುಸ್ಲಿಂ ಸಮುದಾಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆನ್ನಿಗೆ ಯಾವಾಗಲೂ ಇದೆ. ನಮ್ಮ ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಿದ್ದಾರೆ. ಅವರ ಬಳಿ ಯಾರೇ ಯಾವ ಸಮಸ್ಯೆಗಳನ್ನು ಹೊತ್ತುಕೊಂಡು ಹೋದಲ್ಲಿ ತಕ್ಷಣವೇ ಪರಿಹಾರ ಸೂಚಿಸುತ್ತಾರೆ. ಖಾಲಿ ಕೈಯಿಂದ ಕಳಿಸಿದ ಉದಾಹರಣೆಯೇ ಇಲ್ಲ. ನಮ್ಮ ಸಮುದಾಯಕ್ಕೆ ಸಾಕಷ್ಟು ಉಪಕಾರ ಮಾಡಿರುವ ಶಾಸಕರ ಋಣವನ್ನು ನಾವೆಲ್ಲರೂ ಅವರಿಗೆ ನಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಪ್ರಚಂಡ ಬಹುಮತದಿಂದ ಆಯ್ಕೆ ಮಾಡೋಣ”ಎಂದರು.

ಅಧ್ಯಕ್ಷತೆಯನ್ನು ಹಿರಿಯ ಮುಖಂಡ ಜನಾಬ್ ಎಚ್.ಡಿ.ಮುಲ್ಲಾ ವಹಿಸಿದ್ದರು. ವೇದಿಕೆಯಲ್ಲಿ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಮುಸ್ಲಿಂ ಸಮಾಜದ ಮುಖಂಡರಾದ ಅಜೀಜ್ ಡಾಂಗೆ, ಮಲ್ಲಿಕ ಹುಣಶ್ಯಾಳ, ಅನ್ವರ ನದಾಫ, ಹುಸೇನ್ ಸಾಬ ಶೇಖ, ಅಬ್ದುಲ್‌ ಗಫಾರ ಡಾಂಗೆ, ನನ್ನುಸಾಬ ಶೇಖ, ರಾಜೇಸಾಬ ಖೇಮಲಾಪುರ, ಹಾಜಿಪೀರ್ ಮೊಹ್ಮದ್ ಮುಲ್ಲಾ, ಅಮೀನ್ ಸಾಬ ಯಳ್ಳೂರ, ಹಾಸಿಮ್ ನಗಾರ್ಚಿ, ದಸ್ತಗೀರಸಾಬ ಶಿರಹಟ್ಟಿ, ನಿಜಾಮಸಾಬ ಜಮಾದಾರ, ರಿಯಾಜ್ ಯಾದವಾಡ, ಇಕ್ಬಾಲ್ ಸರ್ಕಾವಸ್, ರಸೂಲ ಮಿರ್ಜಾನಾಯಿಕ, ರಾಜು ಬಳಿಗಾರ, ಹಾಜೀಸಾಬ ನದಾಫ, ಬಂದೇನವಾಜ ನದಾಫ, ಶಾನೂರ ಮೊಘಲ, ಇಮಾಮ ಮೋಮಿನ್, ಇಸ್ಮಾಯಿಲ್ ಲಾಡಖಾನ, ಎಂ.ಎಸ್.ದಂತಾಳೆ, ಮಕ್ತುಮಸಾಬ ಖಾಜಿ, ಸೇರಿದಂತೆ ಅರಬಾವಿ ಕ್ಷೇತ್ರದ ಮುಸ್ಲಿಂ ಸಮುದಾಯದವರು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮುಸ್ಲಿಂ ಸಮಾಜದವರು ಅದ್ದೂರಿಯಾಗಿ ಸತ್ಕರಿಸಿದರು.
ಜಾನಪದ ಗಾಯಕ ಶಬ್ಬೀರ ಡಾಂಗೆ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಕುರಿತು ಹಾಡಿರುವ ಹಾಡಿಗೆ ಸಭಿಕರು ಕುಣಿದು ಕುಪ್ಪಳಿಸಿದರು. ಹಾಫಿಜ್‌ಉಮರ್ ಶೇಖ ಖುರಾಣ ಪಠಣ ಬೋಧಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪಟ್ಟಣದ ಬಸವೇಶ್ವರ ವೃತ್ತದಿಂದ ಬೃಹತ್ ಮೆರವಣಿಗೆ ಮೂಲಕ ಮುಖ್ಯವೇದಿಕೆಗೆ ಬರಮಾಡಿಕೊಳ್ಳಲಾಯಿತು. ಶರೀಫ ನದಾಫ ಸ್ವಾಗತಿಸಿದರು.

You cannot copy content of this page